
ಮುಂಗಾರು ಮಳೆ ಕೈಕೊಟ್ಟಿತು.ಬಿತ್ತಿದ ಎಳ್ಳು ಒಡಲೊಳಗೆ ಹುದಗಿ ಬೆಂದ ಹೋಗಿತ್ತು.ದಿನ್ನೆ ಹೊಲಗಳಲ್ಲಿ ಅಷಾಢದ ಗಾಳಿ ಬಿಕೋ ಎಂದು ಬಿಸುತ್ತಿತ್ತು..ನರಪಿಳ್ಳೆ ಕೂಡ ದಿನ್ನೆ ಹೊಲಗಳ ಕಡೆ ಸುಳಿದಿರಲಿಲ್ಲ.
ಮುಂಗಾರು ಪೂರ್ವ ಮಳೆಗೆ ಒಂದ್ಸರಿ ಹದ ಕಂಡಿದ್ದ ಭೂತಾಯಿ ಮಳೆ ಸ್ವಗತಕ್ಕಾಗಿ ಕಣ್ಣ್ ತೆರೆದು ಹಂಬಲಿಸುತ್ತಿತ್ತು……ದನ,ಕರುಗಳು ಬೂತಮ್ಮನ ಬೆಟ್ಟದ ತಂಗಾಡಿ ಸೊಪ್ಪು ತಿಂದು ಪೇರಲವಗೊಂಡಿದ್ದವು.ಸೀಮೆ ಹಸುಗಳಿಗೆ ಮೇವು ಇಲ್ಲದೆ ಹಾಲು ಉತ್ಪಾದನೆ ಕುಂಠಿತಗೊಂಡು,ಕೈಖರ್ಚಿಗೆ ಕಾಸಿಲ್ಲದೆ ಹೆಂಗಸರ ಎಲೆಯಡಿಕೆ ಚೀಲ ಬಿಕೋ ಎನ್ನುತ್ತಿತ್ತು.ಗಂಡಸರ ಸೋಮಾರಿತನ ಹುಣಿಸಿಕೋಟೆಯಲ್ಲಿ ಮಾಮೂಲಿಯಾಗಿತ್ತು.ರಾಗಿ,ಅವರೇ,ಅಲಸಂದೆ,ಹುಚ್ಚೇಳ್ಳು ಇಲ್ಲದೆ ರೈತಾಪಿ ಮಹಿಳೆಯರು ಹೇಗಪ್ಪ ಬದುಕು ಎನ್ನೋ ಚಿಂತಯಲ್ಲಿಯಿದ್ದರು.ಬೋರ್ ವೆಲ್ ನೀರು ಪಾತಳಕ್ಕೆ ಇಳಿದು,ಗಟ್ಟಿಪುರ ಮನೆಯವರು,ಸೀತಾರಾಮಣ್ಣೋರ ಮನೆಯೋರು ವ್ಯವಸಾಯ ನೀನು ಸಾಯ ಎನ್ನೋ ಸ್ಥಿತಿಗೆ ಬಂದಿದ್ದರು…..
ಈ ಮಧ್ಯದಾಗ,ಟಮೋಟೆಗೆ ಬೆಲೆ ಇಲ್ಲದೆ,ರಸ್ತೆಗೆ ಬಂದಿದ್ದು…..ಅಷಾಢದ ದೀಪಗಳ ಹಬ್ಬ .ಸಾಲ ಸೋಲ ಮಾಡಿ ಕೆಜಿಗಟ್ಟಲೇ ಬಾಡು ತಿನ್ನೋದೆ ಹಬ್ಬದ ವಿಶೇಷ.ಕೋಲಾರ ಸೀಮ್ಯಾಗ ಹುಣಿಸಿಕೋಟೆಯಲ್ಲಿ ದೀಪದ ಹಬ್ಬ ಎಂದರೆ,ಅಷ್ಟೋಂದು ಫೇಮಸ್.ತಿನ್ನಕ್ಕೆ ಹಿಟ್ಟು ಇಲ್ಲದಿದ್ದರೂ ಇದೊಂದು ಒಣಪ್ರತಿಷ್ಟೆ.ಕೆ.ಜಿ ಗಟ್ಟಲೇ ಬಾಡನದ್ದೆ ಕಾರುಬಾರು.ನೆಂಟರಿಷ್ಟಿರು ಶ್ಯಾನೆ ಆದಮ್ಯಾಕ್ಕ ಪೆಂಡಾಲ್ ಅದೂ ಇದೂ ಹೀಂಗೆ ಏನೇನು ವ್ಯವಸ್ಥೆಗಳು ದುಬಾರಿ ಸಂಕಷ್ಟ.ರೈತರ ಜೇಬು ಖಾಲಿ ಮಾಡಿತ್ತು.
ಕೇಡುಗಾಲ ಬಂದರೂ,ಈ ಊರಾಗ ಬಡ ತಿನ್ನೋಕೆ ಬರ ಅನ್ನೋದು ಕೆಂಪನಹಳ್ಳಿ,ಟೇಕಲ್, ಉಳ್ಳೇರಹಳ್ಳಿ ಜನರ ವಾಡಿಕೆ ಮಾತು.ಶ್ರಾವಣ ಶುರುವಾದರೂ,ಹನಿ ನೀರು ಉದರಲೇ ಇಲ್ಲ.ತ್ವಾರಣಹಳ್ಳಿ ಕೆರೆ,ಗಟ್ಟಿಪುರ ಕೆರೆಗಳು ತುಂಬಿ ವರ್ಷಗಳೇ ಕಳೆದಿದ್ದವು.ಬರಗಾಲ ಬಂತು ಎಂದರೆ,ಕರೆಯಲ್ಲಿ ಸಿಗೋ ಮೀನು ಸೊಪ್ಪು,ಗೊಡ್ಡಿಗಡ್ಡೆ ಉಪ್ಪನೀರು ಎಸರು ತಿಂದು,ತಿಂದು ಬಾಯಿ ರುಚಿ ಕೆಟ್ಟಿ ಹೋಗಿರೋದು.ಪಾಪ…..ಹೆಂಗಸರು ತಾನೇ ಏನು ಮಾಡೋಕ ಅತದಾ ಹೇಳಮ್ಮೊ ….ಹೀಂಗೆ ಬರಗಾಲದ ಸಾವಿರ ಕಷ್ಟಗಳನ್ನ ಹೊಗೆಸೊಪ್ಪು ನಮಲುತ್ತ ಹೆಂಗಸರು ಬೂತಮ್ಮನ ಬೆಟ್ಟ ದಿಟ್ಟಿಸಿ ಮೋಡಣ್ಣನನ್ನು ಬೈಕಂತ್ತಿದ್ದರು.
ಉಯ್ಯೋ ಉಯ್ಯೋ ಮಳೆರಾಯ… ಪದವನ್ನು ಹೇಳಿಕೊಂಡು ಹೈಕಳು ಕೆರಯಲ್ಲಿ ಮಳೆರಾಯನ ಪ್ರಾರ್ಥನೆ ಮಾಡಿದ್ದರು.ಮನೆ ಮನೆ ಬಾಗಿಲಿಗಿ ಹೋಗಿ ಭಿಕ್ಷೆಯೆತ್ತಿದ್ದ ದವಸ ಧ್ಯಾನ್ಯವನ್ನು ಹೈಕಳು ಕೆರೆಯಲ್ಲಿ ಬೇಯಿಸಿ ಮಳೆಗಾಗಿ ಕೈಮುಗಿದಿದ್ದರು.
ಆದರೂ ಮಳೆ ಬರಲಿಲ್ಲ.ಕೆರೆ ಕೋಡಿ ಜನರ ಕಷ್ಟ ಹೇಳುತ್ತಿತ್ತು…..
ಯಾತಕ್ಕೆ ಮಳೆ ಹೋಯಿತೋ ತಮ್ಮ .ಯಾತಕ್ಕೆ ಮಳೆ ಹೋಯಿತೋ …ಕಾರಣಗಳು ನೂರಾರು:ಕೂಲಿ ನಾಲಿ ಮಾಡೋರಿಗೆ ಉಪ್ಪುಗಂಜಿಯೇ ಮೃಷ್ಟಾನವಾಯಿತು.ಗಣೇಶನ ಹಬ್ಬ,ಮಾರನಾಮಿ,ದೀಪಾವಳಿ ಕ್ಯಾಲೆಂಡರ್ ಹಬ್ಬವಾಯಿತು.ಮನಸ್ಸುಗಳಿಗೆ ಹಬ್ಬವಾಗಲಿಲ್ಲ.ಹೊಸ ದ್ಯಾವರ ಬಂಡೆ ಮೇಲೆ ಕುಯ್ಯುತ್ತಿದ್ದ ಕುರಿ,ಹಂದಿಗಳ ರಕ್ತದ ಕಲೆಗಳು ಮಾಸಿದ್ದವು.
ವರ್ಷ ಕಳೆದಿತ್ತು.ಬೀಕರ ಬರಗಾಲದ ಕಹಿನೆನಪುಗಳು ಹಿಂಡಿ ಹಿಪ್ಪೆ ಮಾಡಿತ್ತು.
ಮಾರನೇ ವರ್ಷ…. ಫಲಸು ಆಗವಷ್ಟು ಮಳೆ.ಆದರೆ,ಹೊತ್ತಾರೆ ತೊಳಕೊಳ್ಳಕ್ಕೂ ಕೆರೆ,ಕುಂಟೆಗಳಲ್ಲಿ ನೀರ ಸಿಗದಷ್ಟು ಕಡಿಮೆ ಪ್ರಮಾಣ.ಈ ವರ್ಷನೂ ಇದೇ ಸ್ಥಿತಿ ಮುಂದುವರಿಯುವ ಮನ್ಸೂಚನೆ.
ಆದರೂ ಏನಂತೆ ಕಲ್ಲುಗಣಿಗಾರಿಕೆಯೇ ಹುಣಿಸೀಕೋಟೆ ಜನರಿಗೆ ಅನ್ನ ಇಕ್ಕುತ್ತಿದೆ.ಸಂಪನ್ಮೂಲ ಮುಗಿದು ಹೋದರೆ,ಬದುಕು ರಾಮ ಗೋವಿಂದ ಅನ್ನೋದು ಗೊತ್ತಿದೆ.ಬೇಜಾನ್ ಟ್ರೈನ್ ಸೌಲಭ್ಯ.ಕೆಜಿಎಫ್, ಬಂಗಾರಪೇಟೆ,ಕುಪ್ಪಂ,ಟೇಕಲ್ ಸೀಮೆಗಳಿಂದ ದಿನನಿತ್ಯ ಸಾವಿರಾರು ಜನರು ಬೆಂಗಳೂರಿಗೆ ಬತ್ತಾರೆ.ಒಂದೂವರೆ ಗಂಟೆಯಲ್ಲಿ ಬೆಂಗಳೂರು ಸೇರಬಹುದಾಗಿರುವುದರಿಂದ ಬೇಕಾದ ಕೆಲಸ ಮಾಡ್ತಾರೆ.ಬರಗಾಲ ಬಂದರೆ ಏನು, ಕೇಡುಗಾಲ ಬಂದರೂ ಏನು .. ಜನರು ಬದಲಾವಣೆಗೆ ಒಗ್ಗಿಕೊಂಡಿದ್ದಾರೆ..
ಗುಂಡುತೋಪುಗಳು ಮಳೆ ಮೋಡವನ್ನ ತರಲ್ಲ.ಕೋಲಾರ ಬೆಟ್ಟ ಮ್ಯಾಗ ಮಳೆ ಬರಲ್ಲ.ಅಕಾಶ ನೋಡಿ,ವರ್ತಮಾನ ಹೇಳುವ ಓಬ್ಬಟ್ಟಿ ಸಂಜೀವಪ್ಪ ಮಾತು ಯಾಕೋ ದಿಟವಾಗುತ್ತಿದೆ.
ಆದರೂ ಮಳೆ ಬರಲಿಲ್ಲ….ಮನಸ್ಸು ಮಾತ್ರ ಪ್ರಾರ್ಥನೆ ಮಾಡುತ್ತಲೇ ಇದೆ.